ಕರಾವಳಿಯ ನೃತ್ಯಸರಸ್ವತಿ : ಶ್ರೀಮತಿ ಜಯಲಕ್ಷ್ಮಿ ಆಳ್ವ

Abstract

ಮೊಗೆಮೊಗೆದು ಪ್ರೀತಿ ಸುರಿಸುವ ಆ ಹೊಳೆಯುವ ಕಣ್ಣ್ಣುಗಳಲ್ಲಿ ಮಾತೃತ್ವದ ಮಮತೆಯ ಸುಧೆ. ಹಾರ್ದ ಒಡನಾಟದಲ್ಲಿ ಹ್ಲಾದವೆನಿಸುವ ಕಲಾಕಂಪಿನ ತಂಪು. ಉಡುತ್ತಿದ್ದ ಬಿಳಿಸೀರೆಯ ಅಂಚು ಅಂಚಿನಲ್ಲೂ ಅನುಭವದ ಪಾಕಕ್ಕೆ ಹರಳುಗಟ್ಟಿದ ನಿರ್ಭಿಡೆಯ ನಿಲುವು. ಸದಭಿರುಚಿಯ ಕಲಾಪ್ರಯತ್ನಗಳಿಗೆ ಮುಕ್ತಮನಸ್ಸಿನ ಬಿಚ್ಚು ಮಾತು, ಅನಗತ್ಯ ವಾದಸರಣಿಗಳಿಂದ ದೂರವುಳಿದು ಕಲೆಯನ್ನೇ ನಿರಂತರ ಧ್ಯಾನಗೈಯುವ ಅಧ್ಯಯನನಿಷ್ಠೆ, ಕಲಾಕೈಂಕರ್ಯದಲ್ಲಿ ಅವಿರತ ತೊಡಗಿಸಿಕೊಂಡವರನ್ನು ಎಂದೆಂದಿಗೂ ಪ್ರೀತಿಸಿ ಆದರಿಸುವ ಪಕ್ವತೆ, ಸದಾ ಸ್ಮಿತಪೂರ್ವಾಭಿಭಾಷಿಣಿ- ಅಂತಹ ತಾಯಿ, ಕರಾವಳಿಯ ನಾಟ್ಯಕಲಾ ತಪಸ್ವಿನಿ ಜಯಲಕ್ಷ್ಮಿ ಆಳ್ವ ಇಂದು ನಮ್ಮೊಂದಿಗಿಲ್ಲ. ಆದರೆ ಕಲಾಕ್ಷೇತ್ರವನ್ನೂ ಒಳಗೊಂಡಂತೆ ಅವರು ನೂಪುರ ಭ್ರಮರಿಯೊಂದಿಗೆ ಇಟ್ಟುಕೊಂಡಿದ್ದ ಬೆಚ್ಚನೆಯ ಅನುಬಂಧ, ಯಾವುದೇ ಲೇಖನವನ್ನಾದರೂ ಆಸಕ್ತಿಯಿಂದ ಓದಿಸಿಕೊಳ್ಳುತ್ತಿದ್ದ ಮಮತೆಯನ್ನು ಎಂದೆಂದಿಗೂ ಮರೆಯುವಂತಿಲ್ಲ.